ಆಕೆಯನ್ನುನೋಡುವ ಕಾತರ ಬಹಳ ದಿನಗಳಿಂದ ಇದ್ದಿತ್ತಾದರೂ ನೋಡುವ ಶುಭಗಳಿಗೆ ರಾಜ್ಯೋತ್ಸವದಂದು ಲಭಿಸಿದ್ದು ನನ್ನ ಭಾಗ್ಯವೇ ಸರಿ."ಕಲ್ಪನೆಯ ಅಮರಾವತಿಯನ್ನೂ ನಾಚಿಸುವ ಝರಿಯ ಸಿರಿಯದು. ಕೊಡಚಾದ್ರಿಯ ತಪ್ಪಲಿನ ದಟ್ಟ ಕಾನನದ ನಡುವೆ ಅಪರಿಚಿತರಿಗೂ ಅನಂತ ಪ್ರೇಮ ಸುಧೆಯ ಜಲಧಾರೆ ಈಯುವಾಕೆ,ಈಕೆ ಬೆಳ್ಕಲ್ ಸುಂದರಿ..."
ಮಿತ್ರ ಅಶ್ವತ್ಥನೊಂದಿಗೆ ಹೊರಟ ಸವಾರಿ ಅಂಪಾರಿನಲ್ಲಿ ಒಂದು ಕಿಲೋ ಸೇಬು ತೆಗೆದುಕೊಳ್ಳುವುದರಿಂದ ಆರಂಭಿಸಿ,ಜಡ್ಕಲ್ಲಿನಿಂದ ಮುದೂರು ಮಾರ್ಗವಾಗಿ ಸಾಗಿ ಅಲ್ಲಿಂದ ಕ್ಷೌರದಂಗಡಿ-ರಬ್ಬರ್ ತೋಟದವರು ದಾರಿಹೋಕರು ಹೀಗೇ ಹಲವರಲ್ಲಿ ದಾರಿ ಕೇಳುತ್ತಾ ಹಾದಿಯ ಕೊನೆಗೆ ಗಣಪತಿ ದೇವಾಲಯದ ಸಮೀಪ ಸ್ವಲ್ಪ ಮುಂದೆ ಸಾಗಿ ಅಲ್ಲಿಯೆ ಒಬ್ಬರ ಮನೆಯಲ್ಲಿ ಅವರ ಅಣತಿಯಂತೆ ನಮ್ಮ ವಾಹನವನ್ನು ಇರಿಸಿ,ನಮ್ಮ ಚಾರಣವನ್ನು ಆರಂಭಿಸಿದೆವು.
ದಟ್ಟ ಕಾಡಿನ ನಡುವೆ ಒಂಟಿ ಹಾದಿಯ ಪಯಣದಲ್ಲಿ ಅಲ್ಲಲ್ಲಿ ವಿರಮಿಸುತ್ತ ಮಹಾವೃಕ್ಷಗಳ ಮಡಿಲಲ್ಲಿ ಕೂತು ಗರ್ಭಸ್ಥ ಶಿಶುವಿನ ಬೆಚ್ಚನೆಯ ಭಾವವನು ಮೈದಳೆಯುತ್ತ ಮುಂದೆ ಸುಮಾರು ೪೫ ನಿಮಿಷಗಳ ಕಾಲ್ನಡಿಗೆಯ ನಂತರ ಆಕೆ ಒಮ್ಮೆ ದರುಶನವಿತ್ತಳು.ಅದಾಗಲೇ ಭೋರ್ಗರೆವ ನೀರ ರವದ ನಡುವೆ ಮನುಷ್ಯರ ಕೇಕೆ -ಹಾಹಾಕಾರ ಕೇಳಿಸುತ್ತಿತ್ತು. ಇದ್ಯಾಕೆ ಹೀಗೆ ಚೀರಾಡುವರು ಇವರು ಎಂಬ ನಮ್ಮ ಪ್ರಶ್ನೆಗೆ ನಮಗೆ ಆಕೆ ನಂತರ ಉತ್ತರ ಇತ್ತಿದ್ದಳು ಅಂಬೋಣ.ಕೊನೆಗೂ ಆಕೆಯ ಪೂರ್ಣ ದರ್ಶನ ಪಡೆಯುವಲ್ಲಿ ಸಫಲರಾದ ನಾವು ಆಕೆಯ ಪಾದಸ್ಪರ್ಶಕೆ ಹಂಬಲಿಸುತ್ತಿದ್ದೆವು . ಛಾಯಾಗ್ರಹಣದ ಶಾಸ್ತ್ರವನ್ನು ಒಮ್ಮೆ ಮುಗಿಸಿ, ಆಕೆಯ ಮಡಿಲಲ್ಲಿ ಮಗುವಾಗುವಾಸೆಯಿಂದ ಅವಳೆಡೆಗೆ ಬಂಡೆಗಲ್ಲುಗಳ ದಾಟಿ ತಲುಪಿದೆವು . ನಮ್ಮ ಪುಣ್ಯ ಇಂಬಳಗಳ ಕಾಟವಿಲ್ಲ.
ಮನಸೋ ಇಚ್ಛೆ ...ಮನದಣಿಯೆ ಮೀಯುವಾಗ ಆಕೆಯ ಮಡಿಲಲ್ಲಿ ಉಳಿದವರು ಯಾಕೆ ಕೂಗುತ್ತಿದ್ದರು ಎಂಬುದಕ್ಕೆ ಉತ್ತರವಿತ್ತಿದ್ದಳು .ಕೊಂಡೊಯ್ದ ಸೇಬುಗಳನ್ನು ಅಲ್ಲಿ ತಿನ್ನುವಾಗ ಅದೆಂತಹ ಖುಶಿಯೊ ನಾ ತಿಳಿಯೆ...ಅಲ್ಲದೆ ಸಾವಿರ ಸಾವಿರ ಸೂಜಿಯಿಂದ ಒಮ್ಮೆಲೇ ಮೈಯನ್ನು ಚುಚ್ಚಿದ ಅನುಭವ...ಸುಮಾರು ೮೦ ಮೀಟರ್ ಎತ್ತರದಿಂದ ಬೀಳುವ ಸಹಸ್ರಾರು ನೀರ ಹನಿಗಳಿಗೆ ಮೈಯೊಡ್ಡಿ ನಿಲ್ಲುವಾಗ ಸಾಕೆನಿಸುವಷ್ಟು ಆನಂದ...ಅಪರಿಮಿತ ಸುಖದ ಅನುಭೂತಿ...ಅದನ್ನು ಪದಗಳಿಂದ ವಿವರಿಸಲಾಗದೇನೋ...ವಾಯುವಿನ ಆಟಕ್ಕೆ ಈಕೆ ನಡೆಯುತಿಹ ನಾರಿಯ ನೀಳ್ಜಡೆಯಂತೆ ಅತ್ತಿಂದಿತ್ತ ಹೊಯ್ದಾಡುತ್ತಿದ್ದಳು. ಸುಮಾರು ೨೦ ಮೀ ಅಗಲದವರೆಗೂ ಇವರಿರ್ವರ ಆಟದ ಪರಿಧಿಯಿತ್ತು.
ಈಕೆಯ ಪ್ರೇಮಪಾಶದಿ ಬಂಧಿಯಾದಾಗ ಒಮ್ಮೆ ಅನಿಸಿತ್ತು...ಪ್ರತಿ ತಾಯಿಗೂ ಪ್ರಸವ...ಎಂಬುದು ವೇದನೆಯಾದರೂ ಕರುಳ ಬಳ್ಳಿ ಬರುವುದೆಂದು ಸಂತಸವಲ್ಲವೇ...ಆನಂದದ ಹಾಗೂ ಕಷ್ಟದ ಸಮಯ ಒಟ್ಟಿಗೆ ಬಂದಾಗ ಅದನ್ನು ಮರೆಯಲಾಗದು ಎಂಬ ಮಾತು ಅಕ್ಷರಶಃ ನಿಜ ಅನ್ನಿಸಿತ್ತು.ರಪರಪನೆ ಬೀಳುವ ನೀರ ಹನಿಯಡಿಯಲ್ಲಿ ನಿಲ್ಲಲಾಗದು...ನಿಲ್ಲದೇ ಬಿಟ್ಟು ಹೋಗಲು ಮನಸಾಗದು.ಅದೊಂದು ಮಾದಕತೆ.ಆ ಸಮಯ ನಮ್ಮ ಬಾಯಲ್ಲಿ ಬರುವ ಪ್ರತಿ ವಾಕ್ಯಗಳು ಕವನದಂತಿದ್ದವು.
ಮನಸ್ಸಿಲ್ಲದಿದ್ದರೂ ಕಾಲನ ಭಯದಿಂದ ಆಕೆಯ ಮಡಿಲಿನಿಂದ ಹೊರಬಂದು ಮೈಯೊರಸಿಕೊಂಡು ಉಳಿದ ಸೇಬುಗಳನ್ನು ತಿಂದು ಆಕೆಯ ಪೂರ್ಣ ಸ್ವರೂಪವನ್ನು ಕೆಮರಾದಿಂದಲೂ ಕ್ಲಿಕ್ಕಿಸಿ ,ಸ್ವಲ್ಪ ವಿರಮಿಸಿ ನಂತರ ಆ ಭೂಸ್ವರ್ಗದಿಂದ ಬಂದ ದಾರಿಯಲ್ಲಿಯೇ ಹೊರಟು ಸ್ವಲ್ಪ ದೂರದಲ್ಲಿಯೇ ಆಕೆಯಿಂದ ಹುಟ್ಟಿದ ಇನ್ನೊಂದು ಜಲಧಾರೆಯನ್ನೂ ಕಂಡು ಊರಿನೆಡೆಗೆ ಸಾಗಿದೆವು. ಹೋಗುವಾಗ ಕೆಲವು ಸ್ಥಳಗಳಲ್ಲಿ ಆಡಿದ ಸಾಂದರ್ಭಿಕ ಮಾತುಗಳು ಹಾದಿಯ ನೆನಪಿಗೆ ಸಹಕಾರಿಯಾಯ್ತು .ಐತಾಳ್ರು ಇದನ್ನೆ Trekking tips ಆಗಿಯೂ ನೀಡಬಹುದೆಂದು ಹೇಳಿದರು.ಕೊನೆಗೆ ಗಾಡಿಯನ್ನು ತೆಗೆದುಕೊಂಡು,ಸ್ವಲ್ಪ ಮುಂದೆ ಬಂದುಒಂದು ಗದ್ದೆಯ ಸಮೀಪ ನಿಲ್ಲಿಸಿ ಪುನಹ ಆ ಜಲಸಿರಿಯ ಪೂರ್ಣ ರೂಪವನ್ನು ನೋಡಿ,ಕ್ಲಿಕ್ಕಿಸಿ ಅಲ್ಲಿಯೇ ಇದ್ದ ಗಿಣಿಗಳ ಛಾಯಾಗ್ರಹಣ ಮಾಡಿ ಅಲ್ಲಿಂದ ಹೊರಟು ಐತಾಳರ ಮನೆ ತಲುಪಿ ಬಿಸಿ ಬಿಸಿ ಕಾಫಿ ಹೀರಿ ದೋಸೆ -ಹೋಳಿಗೆ ತಿಂದು ಮನೆ ತಲುಪಿದಲ್ಲಿಗೆ ...ನನ್ನ ನೆನಪಿನ ಕಡತಕ್ಕೆ ಇನ್ನೊಂದು ಖುಶಿಯ ಪುಟವ ಸೇರಿಸುತ್ತಾ ಈ ಕಥೆಯನ್ನು ಮುಕ್ತಾಯ ಮಾಡುತ್ತಿದ್ದೇನೆ .
* ದಾರಿಯ ಮಾಹಿತಿ ನೀಡಿದ ಮಿತ್ರ ಉಮೇಶಣ್ಣ ಹಾಗೂ ನಾಗರಾಜ ಉಡುಪರಿಗೂ ಧನ್ಯವಾದ.
* ಇಲ್ಲಿ ಬೇಸರದ ಸಂಗತಿಯೆಂದರೆ ಪ್ರವಾಸಿಗರು ಸುಂದರ ಕಾನನದ ಅಂದವನ್ನು ಪ್ಲಾಸ್ಟಿಕ್ ಇನ್ನಿತರ ಕಸಗಳಿಂದ ಮಲಿನಗೊಳಿಸುತ್ತಿರುವುದು.ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ.ಆದ್ದರಿಂದ ...ಪ್ರಕೃತಿಯ ಬಗ್ಗೆ ಶುದ್ಧ ಕಾಳಜಿಯುಳ್ಳವರಾಗೋಣ.ನಾವು ಕೊಂಡೊಯ್ದು ಕಸಗಳನ್ನು ಎಲ್ಲೆಂದರಲ್ಲಿ ಬಿಸಾಡದೇ ಅದಕ್ಕಿರುವ ಜಾಗದಲ್ಲಿಯೇ ಎಸೆಯೋಣ . ಪ್ರಾಥಮಿಕ ಶುಚಿತ್ವದ ಅರಿವನ್ನು ಎಲ್ಲರಿಗೂ ಮೂಡಿಸೋಣ.
Nice😍😍
ReplyDeleteDhanyavada.....
ReplyDeleteSuperrr anna
ReplyDelete🙏😊😊
Delete