Thursday, 25 October 2018

ಚಾರ್ಮಾಡಿಯ ಸುತ್ತ.

ಈ ಬಾರಿಯ ನವರಾತ್ರಿಯ ನಂತರ ಒಬ್ಬಳನ್ನಾದರೂ ನೋಡಲೇಬೇಕೆಂಬ ನನ್ನ ಹಂಬಲಕೆ ...ಇಂಬು ಕೊಟ್ಟದ್ದು ಚಾರ್ಮಾಡಿಯ ಸನಿಹದ ಹಲವು ಹಾದಿಗಳು....
ದಶಮಿಯಂದು ಸಂಜೆ ಪ್ರದೀಪನ ಮನೆ ತಲುಪಿ...ಅಲ್ಲಿಂದ ಮರುದಿನ ಬೆಳಗ್ಗೆ ಸ್ನಾನೋಪಾಹಾರಗಳನ್ನೆಲ್ಲ ಮುಗಿಸಿ, ಸಾತ್ವಿಕನ ಆಗಮನ ಗಗನಕುಸುಮವಾದಾಗ ನಾನೊಬ್ಬನೇ ಹೊರಟು ನಿಂತದ್ದು ಯರ್ಮಾಯಿ ಹಾಗೂ ಇನ್ನಿತರ ಚಾರ್ಮಾಡಿಯ ಸಮೀಪದ ಜಲಸುಂದರಿಯರ ನೋಡಲು.
ಉಜಿರೆಗೆ ಬಂದು ಗೂಗಲ್ ಸಹಾಯ ಕೇಳಲು ನನ್ನ ದೂರವಾಣಿಯನ್ನು ಹಿಡಿದರೆ ....ನಾನು ಹ್ಯಾಂಗ್ ತೋರಿಸ್ಲೀ ಅಂತ ....ಹ್ಯಾಂಗ್ ಆಗ್ತಿತ್ತು....
ನಂತರ ಸ್ಥಳೀಯರ ಬಳಿ ಕೇಳಿ ಮೊದಲಿಗೆ ಎರ್ಮಾಯಿಗೆ ಹೋಗಲು ಹಾದಿ ಹಿಡಿದೆ...ಅಬ್ಬಾ....
ದುರ್ಗಮ ಹಾದಿಯ ಗುಪ್ತಸುಂದರಿ......
ನನಗೆ ಜೊತೆಯಾಗಿ ನನ್ನ ವಿಕ್ರಾಂತ್ 150  ನನ್ನೊಂದಿಗಿದ್ದ....ಅವನ ಸಹಕಾರ ಅತ್ಯಮೂಲ್ಯ.. ಅವನನ್ನು ಅವಳ ಹತ್ತಿರ ಕೊಂಡೊಯ್ಯಲು ಸಾಧ್ಯವಿರಲಿಲ್ಲ...ಸ್ವಲ್ಪ ದೂರ ನಡೆದು....ಊಹೆಮಾಡಿದ ಹಾದಿಯಲ್ಲಿ ಸಾಗಿ...ಕೊನೆಗೆ ಜಲಪಾತದ ಶಿರೋಭಾಗಕ್ಕೆ ತಲುಪಿ...ಅಷ್ಟಿಷ್ಟು ಚಿತ್ರಗಳನ್ನು ಕ್ಲಿಕ್ಕಿಸಿ...ಅಲ್ಲಿಂದ ಜೊತೆಗಾರನಲ್ಲಿಗೆ ಬಂದು , ಅವನನ್ನು ಕಾಡು- ಗುಡ್ಡ - ಕಲ್ಲು - ನದಿ ...ಹೀಗೆ ನಾನಾವಿಧ ಭಯಂಕರ ಮಾರ್ಗಗಳಲ್ಲಿ ನಡೆಸಿ ಮುಖ್ಯ ಹಾದಿಗೆ ತಿರುಗಿದೆ.
    ನಂತರ ಇನ್ನೊಬ್ಬ ಸುಂದರಿಯ ನೋಡಲು ಹೋಗಿ....ತೊರೆ ಪಕ್ಕದ ಮಾರ್ಗಗಳನನುಸರಿಸಿ ನಡೆವಾಗ ಬೆಂಗಳೂರಿನ ಒಂದು ತಂಡ ಆಕೆಯ ನೋಡಿ ಹಿಂದಿರುಗಿತ್ತು.ಅವರು ಕೇಳಿದ್ದು ನೋಡಿ ಈಗಲೂ ನಗು ಬರುತ್ತಿದೆ...."ಉಳಿದವರು ಹಿಂದಿದ್ದಾರಾ"... ಅಂತ....ಯಾರಿದ್ದಾರೆ ನನ್ನ ಬಿಟ್ಟು ....ಈ ಒಂಟಿಪಯಣಿಗನೊಂದಿಗೆ....
ಅಂತೂ ಹದಿನೈದು ನಿಮಿಷಗಳ ಸುಲಭ ಕಾಲ್ನಡಿಗೆಯ ಹಾದಿಯನು ಕ್ರಮಿಸಿ ಆಕೆಯ ಸನಿಹ ಬಂದಾಗ ವರುಣ ಭುವಿಯೆಡಗೆ ದೃಷ್ಟಿ ಹಾಯಿಸತೊಡಗಿದ್ದ.ಅದೂ ಭಯಂಕರ  ನಾದ - ಪ್ರಕಾಶಗಳ ಸಮ್ಮಿಲನದಲ್ಲಿ...ಆ ಅಲ್ಪ ಸಮಯದಲ್ಲೇ ಆಕೆಯ ಸೌಂದರ್ಯವ ಸವಿದು , ನನ್ನ ಸಹಚಾರಿಣಿಗೂ ತೋರಿಸುವಷ್ಟರಲ್ಲಿ , ಮುಸಲಧಾರೆ ಸುರಿಯತೊಡಗಿತ್ತು.
ನಾನು ಒದ್ದೆಯಾದರೂ ಸಮಸ್ಯೆಯಿಲ್ಲ....ಆದರೆ ನನ್ನೊಂದಿಗೆ ಬಂದ ನನ್ನ ಸಹಚಾರಿಣಿಗೆ ಮಳೆ ಎಂದರೆ ಅಲರ್ಜಿ.
ಅದಕ್ಕಾಗಿ ಓಡೋಡಿ ನನ್ನ ವಿಕ್ರಾಂತನ ಬಳಿಬಂದೆ...
ಆ ಬೆಂಗಳೂರಿನ ತಂಡದ ಓರ್ವ ಪೋರಿಯ ಕಾಲುಗಳು ಕಾಡಹಾದಿಯನ್ನು ಕಂಡದ್ದು ಇದೇ ಮೊದಲೇನೋ....ಪಾಪ...ಬೊಬ್ಬರಿಯುತ್ತಿದ್ದವು....
ಅವರುಗಳ ಆಗ್ರಹಕ್ಕೆ ಆ ಪೋರಿಯನು ಅವರ ವಾಹನದವರೆಗೂ ಕರೆದೊಯ್ಯುವ ಜವಾಬ್ದಾರಿ ನನ್ನದಾಯ್ತು....ನಾನಂತೂ ಪೂರಾ ಒದ್ದೆ...ವಿಕ್ರಾಂತನೂ ಇಂತಹ ದಾರಿಯನ್ನು ಈ ಮೊದಲು ಕಂಡವನಲ್ಲ...ನನ್ ಚೀಲವೂ ನೀರು....ಜೊತೆಯಲಿ  ಆ ಪೋರಿ...ಹೊರಟಿದ್ದೇನೋ ಸರಿ....ಮುಕ್ಕಾಲು ಹಾದಿ ಸವೆಯುವಷ್ಟರಲ್ಲಿ ಮಳೆಗೆ ಒದ್ದೆಯಾದ ಗುಡ್ಡದ ಮೇಲುಬದಿಗೆ ತಲಪುವ ಹಾದಿ ಅದಾಗಲೇ ಜಾರತೊಡಗಿತ್ತು.ಆ ಪೋರಿಯನ್ನು ಅಲ್ಲೇ ಇಳಿಸಿದರೂ ನನ್ನ ವಿಕ್ರಾಂತ ಜಪ್ಪಯ್ಯ ಎಂದರೂ ಮುಂದೆಹೋಗಗೊಡಲಿಲ್ಲ.
"ಸಹಾಯಕ್ಕೆ ಪ್ರತಿಫಲ ಬಯಸದಿದ್ದರೂ ಸಿಗುವುದು ಖಂಡಿತ " ಎಂಬುದಕ್ಕೆ ಈ ಸನ್ನಿವೇಶ ನಿದರ್ಶನ. ಆ ಬೆಂಗಳೂರು ಪೋರಿಯ ಸಂಗಡಿಗರು ನನ್ನ ವಿಕ್ರಾಂತನನ್ನು ಗುಡ್ಡ ಹತ್ತುವ  ತನಕ ಹಿಡಿದು ನನ್ನನ್ನಾವರಿಸಿದ್ದ ದುಗುಡ ಭಾವವನು ಕಳೆದರೆಂದರೂ ತಪ್ಪಾಗಲಾರದೇನೋ...
ಅಲ್ಲಿಂದ ಚಾರ್ಮಾಡಿಯ ಮಾರ್ಗದಲ್ಲಿ ಚಲಿಸುವಾಗ ಮಿತ್ರ ಸಾತ್ವಿಕನ ಕರೆ ನನ್ನನ್ನು ನಿಲ್ಲಿಸಿತು.ಅವನೂ ನನ್ನ ಜೊತೆಯಾಗುವೆನೆಂದಾಗ ಮುಂದೆ ಕೊಟ್ಟಿಗೆಹಾರದಲ್ಲಿ ಅವನಿಗಾಗಿ ತುಸು ಕಾಯುವ ನೆಪದಲ್ಲಿ ಕಾಫಿ ಹೀರಿ...ಅಲ್ಲಿಂದ ಮುಂದೆ ಹೊರನಾಡು - ಶೃಂಗೇರಿ ವೃತ್ತದಲ್ಲಿ ಸವಿತಾ ಕ್ಯಾಂಟಿನ್ ಅಲ್ಲಿ ಅಜ್ಜಿ ಮಾಡಿದ ಮೆಣಸಿನ ಬಜ್ಜಿ ತಿಂದು , ಸಾತ್ವಿಕನ ಆಗಮನದ ನಂತರ ಮತ್ತೊಮ್ಮೆ ಬಜ್ಜಿ - ಚಹಾ ಸವಿದು ಅಲ್ಲಿಂದ ಶೃಂಗೇರಿ ಗಣೇಶಸದನಕೆ ತಲುಪಿದೆವು.
ಅಲ್ಲಿ ...ನಾನು, ಸಾತ್ವಿಕ , ಹಂಗಾರಿ , ಗಣೇಶ , ಮತ್ತೊಬ್ಬ ಗಣೇಶ ಹೀಗೆ ಐವರ ಮಾತು ಮುಗಿಲು ಮುಟ್ಟದ್ದು ನಮ್ಮ ಪುಣ್ಯ, ಅಷ್ಟು ಹರಟೆ. ಮಧ್ಯೆ ಸಾತ್ವಿಕ ಕೇಳುವ ಪ್ರಶ್ನೆ ನಾಳೆ ಎಲ್ಲಿ ಹೋಗುದು?
ಅದಕ್ಕೊಂದು ಉತ್ತರ.....ಕಥೆ...ಓತ್ಲಾ...ಕ್ಯಾತನಮಕ್ಕಿ ಹೋಗಲು ಬೆಳಗ್ಗೆ ಐದು ಘಂಟೆಗೆ ಏಳುವುದು ಎಂದು ನಿಶ್ಚಯಿಸಿ ಮಲಗುವಾಗ ರಾತ್ರಿಯ ಕೊನೆಯ ಯಾಮ ಆರಂಭವಾಗಿತ್ತು.
ಮರುದಿನ ಐದು ಘಂಟೆಗೆ ಎದ್ದದ್ದು ಸರಿಯಾದರೂ ಹೊರಡುವ ಗಳಿಗೆ ಬದಲಾಗಿ....ಕ್ಯಾತನಮಕ್ಕಿಯಲ್ಲಿ ನೋಡಬೇಕೆಂದಿದ್ದ ಸೂರ್ಯೋದಯ ಮಧ್ಯದಾರಿಯಲೆ ಕಂಡೆವು.
ಅಲ್ಲಲ್ಲಿ ಫೋಟೋ..ನೆಲ್ಲಿ...ಹಾಗೆ ಹೀಗೆ ಎಂದು ಸವಾರಿ ನಿಂತು ನಿಂತು ಸಾಗಿ...ಕ್ಯಾತನಮಕ್ಕಿ ಎಂಬ ಸ್ವರ್ಗದ ಬಾಗಿಲಿನಂತಿದ್ದ
ಆ ಗುಡ್ಡದ ಬುಡಕ್ಕೆ ದುರ್ಗಮವೆಂದುಕೊಂಡ ಹಾದಿಯಲ್ಲಿ ಬಂದೆವು...ಯಾಕೆಂದರೆ ನಿಜವಾದ ದುರ್ಗಮ ಹಾದಿ ಮುಂದಿನದ್ದು.ಜೀಪ್ ನಲ್ಲಿ ಹೋಗಬೇಕಿದ್ದ ಆ ಪ್ರದೇಶಕ್ಕೆ ನಮ್ಮ ಬೈಕ್ನಲ್ಲೇ ಹೋಗುವ ಆಲೋಚನೆ - ನಿರ್ಧಾರ ಗಟ್ಟಿಯಾದಾಗ ಉತ್ಸಾಹ ನೂರ್ಮಡಿಯಾಗಿತ್ತು.
    ಆದರೆ  ಅರ್ಧ ಹಾದಿ ಕಡಿದಾದ ದಾರಿ ಕ್ರಮಿಸುವಷ್ಟರಲ್ಲಿ ನಮಗಿದಿರಾದ ಹಾದಿಯ ಕಂಡು ನಿಬ್ಬೆರಗಾಗಿ ..ನನ್ನ ವಿಕ್ರಾಂತನ ಚಾಲನೆಯ ಉಸ್ತುವಾರಿ ಗಣೇಶನ ಹೆಗಲಿಗೇರಿಸಿದೆ.
ಅಬ್ಬಬ್ಬಾ....ಅದೆಂತಹ ದಾರಿ....ಅಲ್ಲಲ್ಲಾ....ಹೊಂಡ...ಕಲ್ಲು....ಜಾರು ಮಣ್ಣು....ಗಾಡಿಯ ಚಕ್ರ ತಿರುಗುವುದು ಬಿಟ್ಟರೆ ಮುಂದೆ ಹೋಗುವುದೇ ಇಲ್ಲ...ಯಾಕಪ್ಪಾ ಬೈಕ್ ತಂದೆವೂ ಎಂಬಷ್ಟರಲ್ಲಿ ಜೀಪ್ ನಲ್ಲಿ ಬರುತ್ತಿದ್ದ ಇನ್ನೊಂದು ತಂಡದ ನಾಲ್ಕಾರು ಜನ ನಮ್ಮ ಸಹಾಯಕ್ಕೆ ಬಂದರು.
(ವಿ.ಸೂ-ಯಾರಾದರೂ ಹೋಗುವುದಿದ್ದರೆ ಜೀಪ್ನಲ್ಲೇ ಹೋಗುವುದು ಅತ್ಯುತ್ತಮ.)
ಹಾಗೂ ಹೀಗೂ ಗುಡ್ಡದ ಶಿಖರ ತಲುಪುವಷ್ಟರಲ್ಲಿ ಸಾಕು- ಸಾಕಾಗಿತ್ತು...
ಆದರೆ ಅಲ್ಲಿನ ಸೌಂದರ್ಯ ಅದೆಲ್ಲವನ್ನೂ ಮರೆಸಿ ಮನಸಲಿ ಆನಂದದ ಹೊಳೆಹರಿಯಲಾರ‌ಂಭಿಸಿದ್ದು ಅದಕ್ಕಿಂತ ನಿಜ...
ಸುತ್ತೆಲ್ಲಾ ನೋಡಿದರೂ ಹಸಿರ ಹೊದ್ದ ಪರ್ವತರಾಜನ ಅಂಗೋಪಾಂಗಗಳು ಕಣ್ಮನಗಳನ್ನು ಸೆಳೆಯುತ್ತಿತ್ತು.
ಒಂದೆಡೆ ನೀರಝರಿ...ಮಗದೊಂದೆಡೆ ಹಸಿರಸಿರಿ.
ಆಹಾ ...ಭುವಿಸ್ವರ್ಗವಯ್ಯಾ.....ಅದರಲ್ಲೂ ಭಾರತ್ ಮಹಾನ್....ಅಲ್ಲೂ ಕರ್ಣಾಟಕ ಸೌಂದರ್ಯದ ತವರೂರು.....ಆಹಾ.....ಸರಿವ ತಣ್ಣಗಿನ ಗಾಳಿ
 ಮೈಯ ಸೋಕಿ ಮನವ ಪುಳಕಿಸುತ್ತಿದ್ದವು.
ಅಲ್ಲಲ್ಲಾ ಚಿತ್ರಗಳನ್ನು ಕ್ಲಿಕ್ಕಿಸಿ ಮತ್ತೊಂದು ಗುಡ್ಡಕ್ಕೆ ಹೋಗುವ ಹಾದಿಯ ಪರಿಸ್ಥಿತಿ ನೋಡಿ ಅರ್ಧಕ್ಕೆ ಹಿಂತಿರುಗಿ , ಅಲ್ಲಿಂದ ವಾಪಾಸಾಗುವ ಆಲೋಚನೆ ಮಾಡುವಾಗ ಮನದಲ್ಲಿ ಅದಾಗಲೇ ದುಗುಡ ಆವರಿಸಿಯಾಗಿತ್ತು. ಹಾದಿಯ ನೆನೆದು.
ಆ ಹಾದಿಯ ಪರಿಯ ಆಲೋಚಿಸಿದರೇ ಮೈ ಜುಮ್ಮೆನ್ನುತ್ತದೆ.ಅಬ್ಬಬ್ಬಾ.....
ಅಂತೂ ಇಂತೂ ಕೆಳಗಿಳಿದು , ಮಧ್ಯದಲ್ಲಿ ಚಾ - ಬಿಸ್ಕತ್ತುಗಳನ್ನು ಸವಿದು ಗಣೇಶನ ಮನೆಗೆ ಬಂದು ಸ್ನಾನ ಮಾಡಿ
ಅದಾಗಲೇ ಜ್ಯೋತಿ ಅಕ್ಕ ಮಾಡಿಟ್ಟಿದ್ದ (ಉರ್ವಾರುಕ)
ಸೌತೆಕಾಯಿ ಕಡುಬನ್ನು ತಿಂದು...ಮಧ್ಯಾಹ್ನ ಭರ್ಜರಿ ಊಟವನ್ನೂ ಮಾಡಿ....ಭಯಂಕರ ಕ್ರಿಕೆಟ್ ಆಡಿ...ಸಂಜೆ ಅಲ್ಲಿಂದ ಹೊರಟು ಆಗುಂಬೆ ಮಾರ್ಗವಾಗಿ ಸಾತ್ವಿಕ ಆತನ ಮನೆ , ನಾನು ನಮ್ಮ ಸೂರಿನೆಡೆಗೆ ತಲುಪಿ....ಮತ್ತೆ ಮತ್ತೆ ಆ ರುದ್ರಭಯಂಕರ ಅನುಭವಗಳನ್ನು ಮೆಲುಕು ಹಾಕುತ್ತಿದ್ದೇನೆ....










14 comments:

  1. ಮನಮುಟ್ಟುವ ಪ್ರವಾಸಕಥನ,ಸಣ್ಣ ಕತೆಯನ್ನು,ಸರಳವಾಗಿ, ವಿಷಯ ಉರುಹುವಂತೆ ನಿನ್ನಯ ಭಾಷಾ ಪ್ರೌಢಿಮೆ, ಇವೆಲ್ಲವೂ ಎಲ್ಲೋ ಶಿವರಾಮಕಾರಂತರ ಬರವಣಿಗೆಯ ಕೊಂಚ ನೆನಪಿಸಿತು...

    ReplyDelete
    Replies
    1. ಹ ಹ ....ಧನ್ಯವಾದಗಳು... ಆದ್ರೆ...
      ಸಾಗರವೆಲ್ಲೋ ...ಸಣ್ಣ ಹನಿಯೆಲ್ಲೋ....

      Delete
  2. ಪದ್ದಣ್ಣ ನಿಮ್ಮ ಬರಹದ ಶೈಲಿಯು ತುಂಬಾ ವಿಶೇಷವಾಗಿದ್ದು, ಓದುಗರಿಗೆ ಸಂತೋಷವನ್ನುಂಟು ಮಾಡುತ್ತದೆ, ನಾನಂತು ಮನಸ್ಸಿನಲ್ಲೆ ಪ್ರವಾಸವನ್ನು ಮಾಡಿದೆ, ಆ ಜಾಗಗಳನ್ನು ಒಮ್ಮೆ ಆದರೂ ವೀಕ್ಷಣೆ ಮಾಡಲೇ ಬೇಕು.

    ReplyDelete
    Replies
    1. ಖಂಡಿತ ....ಹೋಗಬಹುದಾದ ಸ್ಥಳ...

      Delete